Saturday, May 17, 2025
Homeಕರ್ನಾಟಕವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವದ ಕೊನೆಯ ಹಾಗೂ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಲಕ್ಷಾಂತರ ಪ್ರವಾಸಿಗರ ಜೈಕಾರ ಘೋಷಣೆಗಳೊಂದಿಗೆ ನಿನ್ನೆ ಅದ್ಧೂರಿಯಾಗಿ ನಡೆಯಿತು.

750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಮೈಸೂರಿನ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೇಯರ್ ಶಿವಕುಮಾರ್ ಸೇರಿದಂತೆ ನಾಡಿನ ಗಣ್ಯರು ವೇದ-ಘೋಷಗಳ ನಡುವೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ 21 ಕುಶಾಲತೋಪುಗಳನ್ನು ಹಾರಿಸಲಾಯಿತು. ನಂತರ ಚಿನ್ನದ ಅಂಬಾರಿಯನ್ನು ಹೊತ್ತ ಅಭಿಮನ್ಯು, ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿದಾಗ, ವರಲಕ್ಷ್ಮಿ ಮತ್ತು ವಿಜಯಾ ಆನೆಗಳು ನಿಧಾನವಾಗಿ ಹೆಜ್ಜೆ ಹಾಕುತ್ತ ಮುಂದೆ ಸಾಗಿದವು. ಈ ವೇಳೆ ನೆರೆದಿದ್ದ ಜನಸ್ತೋಮದಿಂದ ಹರ್ಷೋದ್ಗಾರ ಮುಗಿಲು ಮಟ್ಟಿತ್ತು. ಜಂಬೂಸವಾರಿ ಮೆರವಣಿಗೆಯಲ್ಲಿ ನಾಡಿನ ವಿವಿಧ ಜಾನಪದ ಕಲಾತಂಡಗಳು ಹೆಜ್ಜೆ ಹಾಕುತ್ತ ಸಾಗಿದ್ದು ನೋಡುಗರ ಕಣ್ಮನ ಸೆಳೆಯಿತು.

image source: MysuruMemes

ವೀರಗಾಸೆ, ಡೊಳ್ಳುಕುಣಿತ, ಕಂಸಾಳೆ, ನಂದಿಕೋಲು, ಕೋಲಾಟ, ಕರಡಿಕುಣಿತ, ಲಂಬಾಣಿ ನೃತ್ಯ, ಚೋಮನ ಕುಣಿತ, ಹುಲಿವೇಷ ಕುಣಿತ, ಕೀಲುಕುದುರೆ ಕುಣಿತ, ಗೊರವರ ಕುಣಿತ, ಪಟ ಕುಣಿತ, ಪೂಜಾ ಕುಣಿತಗಳು ಹಾಗು ಗಾರುಡಿ ಗೊಂಬೆ ನೃತ್ಯ ಜನಮನ ಸೂರೆಗೊಂಡವು. ಇದಲ್ಲದೆ, ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ಕಲೆ, ಸಾಹಿತ್ಯ, ಇತಿಹಾಸ, ವೈವಿಧ್ಯತೆ ಬಿಂಬಿಸುವ ಸ್ತಬ್ಧಚಿತ್ರಗಳು ಮೆರವಣಿಗೆ ಉದ್ದಕ್ಕೂ ಸಾಗುವ ಮೂಲಕ ಜಂಬೂಸವಾರಿಗೆ ಮೆರಗು ತಂದವು. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಜನಪರ ಯೋಜನೆಗಳ ಕುರಿತ ಸ್ತಬ್ಧಚಿತ್ರಗಳು ಆಕರ್ಷಣೀಯವಾಗಿದ್ದವು. ಅಂಬಾ ವಿಲಾಸ ಅರಮನೆಯಿಂದ ಹೊರಟ ಜಂಬೂಸವಾರಿ ಮೆರವಣಿಗೆ ಮೈಸೂರಿನ ಪ್ರಮುಖ ರಸ್ತೆಗಳ ಮೂಲಕ ಬನ್ನಿ ಮಂಟಪದ ಪಂಜಿನ ಕವಾಯಿತು ಮೈದಾನಕ್ಕೆ ಸಾಗುವಾಗ ರಸ್ತೆಗಳ ಇಕ್ಕೆಲಗಳಲ್ಲಿ ಸೇರಿದ್ದ ಜನರು ನಾಡಿನ ಗತವೈಭವವನ್ನು ಕಣ್ತುಂಬಿಕೊಂಡರು.

ಜಂಬೂಸವಾರಿ ನಂತರ ಮೈಸೂರಿನ ಬನ್ನಿ ಮಂಟಪದಲ್ಲಿ ಆಯೋಜಿಸಿದ್ದ ಪಂಜಿನ ಕವಾಯತು ಪ್ರದರ್ಶನಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿ ಅಶ್ವಾರೋಹಿ ಪೊಲೀಸ್ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಜಿಲ್ಲೆಯ ಸಚಿವರು, ಶಾಸಕರು, ಸಂಸದರು ಉಪಸ್ಥಿತರಿದ್ದರು. ಬಳಿಕ ನಡೆದ ಸಾಹಸಮಯ ಹಾಗೂ ರೋಮಾಂಚನಕಾರಿ ಪಂಜಿನ ಮೆರವಣಿಗೆ ನೋಡುಗರ ಮೈನವಿರೇಳಿಸಿತು.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news