ವಿಧಾನಸಭೆ ಚುನಾವಣೆಗೆ ಸಲ್ಲಿಕೆಯಾಗಿರುವ ಉಮೇದುವಾರಿಕೆಯ ಪರಿಶೀಲನೆಯಲ್ಲಿ 502 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿಯು ತಿಳಿಸಿದೆ.
ಸವದತ್ತಿ-ಯಲ್ಲಮ್ಮ, ಔರಾದ್, ಹಾವೇರಿ, ರಾಯಚೂರು ಮತ್ತು ಶಿವಾಜಿನಗರ ಈ ಐದು ಕ್ಷೇತ್ರದಲ್ಲಿ ನಾಮಪತ್ರಗಳ ಪರಿಶೀಲನೆ ಕಾರ್ಯವು ತಡವಾಗಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಸಂಪೂರ್ಣ ಮಾಹಿತಿಯು ನಿನ್ನೆ ಲಭ್ಯವಾಗಿದೆ ಎಂದು ಹೇಳಿದೆ. 224 ಕ್ಷೇತ್ರದಲ್ಲಿಯೂ ನಾಮಪತ್ರಗಳ ಪರಿಶೀಲನೆಯ ಕಾರ್ಯ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ.
ಗುರುವಾರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಾಗ 3632 ಅಭ್ಯರ್ಥಿಗಳಿಂದ ಒಟ್ಟು 5102 ಉಮೇದುವಾರಿಕೆ ಸಲ್ಲಿಕೆಯಾಗಿದ್ದವು. 3632 ಅಭ್ಯರ್ಥಿಗಳ ಪೈಕಿ 3130 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. 502 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿವೆ. ಕ್ರಮಬದ್ಧವಾಗಿರುವ 3130 ಅಭ್ಯರ್ಥಿಯ ನಾಮಪತ್ರಗಳ ಪೈಕಿ 2890 ಪುರುಷ ಅಭ್ಯರ್ಥಿಗಳ ನಾಮಪತ್ರಗಳು, 239 ಮಹಿಳಾ ಅಭ್ಯರ್ಥಿಗಳ ನಾಮಪತ್ರಗಳಾಗಿದ್ದು ಒಂದು ಇತರೆ ಅಭ್ಯರ್ಥಿಯ ನಾಮಪತ್ರವಾಗಿದೆ.
ಬಿಜೆಪಿ 224, ಕಾಂಗ್ರೆಸ್ 223, ಜೆಡಿಎಸ್ 211, ಎಎಪಿ 212, ಬಿಎಸ್ಪಿ 137, ಸಿಪಿಐಎಂ 4, ಎನ್ಪಿಪಿ 4 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ನೋಂದಣಿಯಾಗಿರುವ ಮಾನ್ಯತೆ ಪಡೆಯದ ಪಕ್ಷಗಳ 736 ಅಭ್ಯರ್ಥಿಗಳು ಮತ್ತು 1379 ಪಕ್ಷೇತರ ಅಭ್ಯರ್ಥಿಗಳ ನಾಮಪತ್ರಗಳು ಸರಿಯಾಗಿವೆ ಎಂದು ಆಯೋಗವು ತಿಳಿಸಿದೆ.
ಸೋಮವಾರ ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದೆ. ನಾಮಪತ್ರಗಳ ವಾಪಸ್ ತೆಗೆದುಕೊಳ್ಳುವ ಅವಧಿಯು ಮುಕ್ತಾಯವಾದ ಬಳಿಕ ಕಣದಲ್ಲಿರುವ ಅಧಿಕೃತ ಅಭ್ಯರ್ಥಿಗಳ ಸಂಖ್ಯೆಯ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ. ಸೋಮವಾರದ ಸಂಜೆಯ ವೇಳೆಗೆ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆಯ ಮಾಹಿತಿ ಲಭ್ಯವಾಗಲಿದೆ.
