ಕೊಡಗು: ತಲಕಾವೇರಿಯಲ್ಲಿ ಇಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಪವಿತ್ರ ತೀರ್ಥೋದ್ಭವ ಘಟಿಸಲಿದೆ. ಜಿಲ್ಲಾಡಳಿತದಿಂದ ಸಕಲ ಸಿದ್ಧತೆ.
ಈದ್ ಮಿಲಾದ್ – ಸರ್ಕಾರಿ ರಜೆ ದಿನ ಬದಲು: 20/10/2021ರ ಬದಲು 19/10/2021ರಂದು ರಜೆ ಘೋಷಣೆ ಮಾಡಿದ ಕರ್ನಾಟಕ ಸರ್ಕಾರ.
ಬೆಂಗಳೂರು: ಕೊರೊನಾ ಆಂಟಿಬಾಡಿ ಕಾಕ್ಟೈಲ್ ಥೆರಪಿ ಯಶಸ್ವಿ.
ಹುಬ್ಬಳ್ಳಿ; ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಪರಾಮರ್ಶೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಹಾವೇರಿ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕುರಿತ ಪ್ರಶ್ನೆಗೆ ಉತ್ತರಿಸಿ, ಉಪಚುನಾವಣೆ ಮುಗಿದ ನಂತರ ತಜ್ಞರ ಸಭೆ ನಡೆಸಿ, ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ತೈಲ ಬೆಲೆ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹಾನಗಲ್: ಕ್ಷೇತ್ರದ ಗೆಜ್ಜಿಹಳ್ಳಿಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶಿವರಾಜ ಸಜ್ಜನರ್ ಅವರ ಪರವಾಗಿ ಸಾರಿಗೆ ಸಚಿವರಾದ ಬಿ ಶ್ರೀರಾಮುಲು ಪ್ರಚಾರ – ಕಾರ್ಯಕರ್ತರ ಸಭೆ.
ಹಾನಗಲ್: ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳಲ್ಲಿ ನಡೆಯುವ ಕಾಂಗ್ರೆಸ್ ಚುನಾವಣಾ ಪ್ರಚಾರ ಹಾಗೂ ಕಾರ್ಯಕ್ರಮಗಳಲ್ಲಿ ಮಾಜಿ ಸಿ ಎಂ ಸಿದ್ಧಾರಾಮಯ್ಯ ಅವರು ಭಾಗಿ.
ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಸ್ಟ್ರೋಕ್ ಫೌಂಡೇಷನ್ ವತಿಯಿಂದ ವಿಶ್ವ ಪಾರ್ಶ್ವವಾಯು ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪಾರ್ಶ್ವವಾಯು ಅರಿವಿಗಾಗಿ ಓಟ ಜಾಥಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಸ್ಟ್ರೋಕ್ ಫೌಂಡೇಶನ್ ಅಧ್ಯಕ್ಷ ಜಿ.ಟಿ.ಸುಭಾಷ್, ಉಪಾಧ್ಯಕ್ಷ ವಿಕ್ರಮ್ ಹುಡೇದ, ಕಾರ್ಯದರ್ಶಿಗಳಾದ ಸೂರ್ಯನಾರಾಯಣ ಶರ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ಸಚಿವರು ಪಾರ್ಶ್ವವಾಯು ಬಗ್ಗೆ ಇರುವ ಅತ್ಯಾಧುನಿಕ ಚಿಕಿತ್ಸೆ ಮೆಕ್ಯಾನಿಕಲ್ ತ್ರಾಂಬೆಕ್ಟಮಿ ಬಗ್ಗೆ ಹೊರಡಿಸಲಾದ ಕನ್ನಡ ಅವತರಣಿಕೆ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ನಂತರ ಸಾರ್ವಜನಿಕರು ಹಾಗೂ ಪಾರ್ಶ್ವವಾಯುನಿಂದ ಗುಣಮುಖರಾದವರು ಸುಮಾರು 3 ಕಿಲೋ ಮೀಟರ್ ಜಾಥಾ ಮಾಡುವ ಮೂಲಕ ಪಾರ್ಶ್ವವಾಯು ಬಗ್ಗೆ ಅರಿವು ಮೂಡಿಸಿದರು. ಸಚಿವ ಡಾ.ಕೆ.ಸುಧಾಕರ್, ಇತ್ತೀಚಿನ ದಿನಗಳಲ್ಲಿ ಪಾರ್ಶ್ವವಾಯುಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸರ್ಕಾರ ಗುಣಮಟ್ಟದ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುತ್ತಿದ್ದು, ಪಾರ್ಶ್ವವಾಯು ಘಟಕ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಸಚಿವರಾದ ಡಾ.ಕೆ.ಸುಧಾಕರ್ ಹೇಳಿದರು. ಜಿ.ಟಿ.ಸುಭಾಷ್, ಪಾರ್ಶ್ವವಾಯು ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬೆಂಗಳೂರು: ಕನ್ನಡ ಭಾಷೆಯ ಮೂಲಕವೇ ಹಲವು ಭಾಷೆಗಳನ್ನು ಕನ್ನಡದ ಕೀಲಿಮಣೆಯಲ್ಲಿ ಚಿತ್ರಿಸುವ ಮೂಲಕ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಕ-ನಾದ ಪೊನೇಟಿಕ್ಸ್ ಸಂಸ್ಥೆ ತಾಂತ್ರಿಕ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಕ್ಕೆ ನಾಂದಿ ಹಾಡಿದೆ. ಭಾರತೀಯ ಭಾಷಾನುಗುಣ, ಬಹು ಭಾಷಿಕ, ಬ್ರಾಹ್ಮೀ-ವರ್ಣ-ಅಕ್ಷರ ವ್ಯವಸ್ಥೆಯ ಕೀಲಿಮಣೆಯನ್ನು ಸಂಸ್ಥೆ ತಯಾರಿಸಿದ್ದು, ಕನ್ನಡ, ತುಳು ಸೇರಿದಂತೆ ಸುಮಾರು 10 ಭಾಷೆಗಳಲ್ಲಿ ಸ್ವರ-ವ್ಯಂಜನಗಳಿಗೆ ಅನುಸಾರವಾಗಿ ಈ ವಿಶೇಷ ಕೀಲಿಮಣೆಯನ್ನು ರೂಪುಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಅದರಲ್ಲೂ ಗ್ರಾಮೀಣ ಮಕ್ಕಳಿಗೆ ಅನುಕೂಲವಾಗುವಂತೆ ಪಠ್ಯಕ್ರಮವನ್ನು ಚಿಕ್ಕ ಗಣಕಯಂತ್ರದಲ್ಲಿ ಅಳವಡಿಸಲಾಗಿದ್ದು, ವಿಶೇಷವಾದ ಸಣ್ಣ ಚೀಲದಲ್ಲಿ ಸುಲಭವಾಗಿ ಕೊಂಡೊಯ್ಯಬಹುದಾಗಿದೆ. ಇದಕ್ಕೆ ಇಂಟರ್ನೆಟ್ ಸೌಲಭ್ಯದ ಅಗತ್ಯವಿಲ್ಲ, ಟ್ಯಾಬ್ ಅಥವಾ ಸ್ಮಾರ್ಟ್ ಮೊಬೈಲ್ ಗೆ ಅಳವಡಿಸಿ ಬಳಸಬಹುದಾಗಿದೆ. ಕೀಲಿಮಣೆಯ ತಯಾರಿಕೆಯ ಹಿಂದೆ ಸುಮಾರು 40 ಮಂದಿ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಇದು ಮೇಕ್ ಇನ್ ಇಂಡಿಯಾದ ಆವಿಷ್ಕಾರವಾಗಿದೆ.
ತುಮಕೂರು: ಖಾಸಗಿ ಬಸ್ ಮತ್ತು ಕ್ಯಾಬ್ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ತುಮಕೂರು ಹೊರವಲಯದಲ್ಲಿಂದು ನಡೆದಿದೆ. ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಇಂದು ಬೆಳಗಿನ ಜಾವ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತರು ಚಿಕ್ಕನಾಯಕನಹಳ್ಳಿ ಹಾಗೂ ತುರುವೇಕೆರೆ ತಾಲೂಕಿನವರಾಗಿದ್ದು, ಹೂವಿನ ವ್ಯಾಪಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಕುರಿತು ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳ: ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತದ ಪರಿಣಾಮ ಕೇರಳದಲ್ಲಿ ಭಾರೀ ಮಳೆಯಾಗುತ್ತಿದೆ. ಕೊಟ್ಟಿಕ್ಕಾಲ್ನಲ್ಲಿ ನಡೆದ ಭೂ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಕೇರಳದ 11 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಿದೆ.
