ಸುದ್ದಿ ಸಂಗ್ರಹ: ಸುರೇಶ ಹಿರೇಮಠ, ಲಿಂಗಸಗೂರು ವರದಿಗಾರರು.
ಹುನಗುಂದ: ತಾಲೂಕಿನ ಸಿದ್ದನಕೊಳ್ಳದ ಶ್ರೀಗಳಾದ ಡಾ.ಶಿವಕುಮಾರ್ ಮಹಾಸ್ವಾಮಿಗಳು, ಇಲಕಲ್ ನಗರದ ನೇಕಾರರ ಸಾಮಾನ್ಯ ಆರೋಗ್ಯ ವಿಚಾರಿಸಿ, ಸಹಾಯಧನವನ್ನು ನೀಡಿ, ಆಶೀರ್ವದಿಸಿದರು.


ಸದಾ ಸಹಾಯಹಸ್ತ ಹಾಗೂ ಅನ್ನ ದಾಸೋಹಕ್ಕೆ ಪ್ರತೀತಿಯಾದ ಹುನಗುಂದ ತಾಲೂಕಿನ ಸಿದ್ದನಕೊಳ್ಳದ ಶ್ರೀ ಸಿದ್ದಪ್ಪಜ್ಜನವರ ಶ್ರೀಮಠದ ಡಾ.ಶಿವಕುಮಾರ್ ಮಹಾಸ್ವಾಮಿಗಳು, ಇತ್ತೀಚಿಗೆ ಇಲಕಲ್ ನಗರದ ನೇಕಾರರ ಸಂಘದ ಪದಾಧಿಕಾರಿಗಳು ಮತ್ತು ಯುವ ಸದಸ್ಯರುಗಳು ಲಾಕ್ ಡೌನ್ ನಿಂದ ವ್ಯಾಪಾರ-ದುಡಿಮೆಯಿಲ್ಲದ ನೇಕಾರರ ಸಂಕಷ್ಟವನ್ನು ಪೂಜ್ಯ ಶ್ರೀಗಳಿಗೆ ತಿಳಿಸಲಾಗಿ, ಸ್ವತಃ ಶ್ರೀಗಳು ನೇಕಾರರ ಮನೆ ಮನೆಗೂ ತೆರಳಿ ಪ್ರತಿ ಕುಟುಂಬಕ್ಕೂ ಶೀಮಠದ ಪರವಾಗಿ ಒಂದು ಪ್ಯಾಕೇಟ್ ಅಕ್ಕಿ ಮತ್ತು ಮೂರು ಸಾವಿರ ರೂಪಾಯಿಗಳನ್ನು ನೀಡಿ “ಮನೋಸ್ಥೈರ್ಯ ಕಳೆದುಕೊಳ್ಳಬೇಡಿ, ಕೋವಿಡ್-19 ಕುರಿತು ಜಾಗೃತರಾಗಿರಿ, ಎಲ್ಲವೂ ಮೊದಲಿನಂತೆ ವ್ಯಾಪಾರದ ವಾತಾವರಣ ನಿರ್ಮಾಣವಾಗುತ್ತದೆ, ನಿಮ್ಮ ಸಾಮಾನ್ಯ ಆರೋಗ್ಯ ಕಾಪಾಡಿಕೊಳ್ಳಿ, ಚಿಂತಿಸಬೇಡಿ” ಎಂದು ಸಮಾಧಾನಪಡಿಸಿದರು.

ಪೂಜ್ಯ ಶ್ರೀಗಳ ಈ ಕಾರ್ಯಕ್ಕೆ ಸಹಾಯ ಪಡೆದ ಕುಟುಂಬಸ್ಥರು ಹಾಗೂ ನೇಕಾರ ಒಕ್ಕೂಟದ ಪದಾಧಿಕಾರಿಗಳು ಹಾಗೂ ಯುವ ಸದಸ್ಯರುಗಳು ಮೆಚ್ಚುಗೆಯೊಂದಿಗೆ ಧನ್ಯವಾದ ಸೂಚಿಸಿದ್ದಾರೆ.