ದೇಶದ ರಾಜಧಾನಿ ದೆಹಲಿ ಪ್ರದೇಶ ತಿದ್ದುಪಡಿ 2023 ವಿಧೇಯಕ ಲೋಕಸಭೆಯಲ್ಲಿ ನಿನ್ನೆ ಅಂಗೀಕಾರವಾಯಿತು. ಗೃಹ ಸಚಿವ ಅಮಿತ್ ಷಾ , ದೆಹಲಿ ಆಡಳಿತ ಸೇವೆಗಳ ವ್ಯಾಪ್ತಿ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದ ಅನ್ವಯ ವಿಧೇಯಕ ಮಂಡಿಸಿದರು. ಅಧಿಕಾರಿಗಳ ವರ್ಗಾವಣೆ, ನಿಯೋಜನೆಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳು ಇನ್ನು ಮುಂದೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರಲಿವೆ. ಸಂವಿಧಾನದ ಅಡಿಪಾಯ ಭದ್ರಗೊಳಿಸಲು ಶ್ರಮಿಸಿದ ಮಾಜಿ ಪ್ರಧಾನಿ ಜವಹರ್ ಲಾಲ್ ನೆಹರೂ , ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸಿದ ಸಚಿವರು, ದೆಹಲಿಯ ಆಡಳಿತಾತ್ಮಕ ನೀತಿ ನಿಲುವಳಿಗೆ ಸಂಬಂಧಿಸಿದಂತೆ ಲೆಫ್ಟಿನೆಂಟ್ ಗೌವರ್ನರ್ ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು. ಮಸೂದೆ ಮಂಡನೆಗೆ ಆಮ್ ಆದ್ಮಿ ಸೇರಿದಂತೆ ಹಲವು ವಿರೋಧ ಪಕ್ಷಗಳು ಪ್ರತಿರೋಧ ವ್ಯಕ್ತಪಡಿಸಿದವು. ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಈ ಮಸೂದೆ ಸೋಮವಾರ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ.
ಮುಂದಿನ 10 ವರ್ಷಗಳಲ್ಲಿ ನೇಪಾಳದಿಂದ ಭಾರತಕ್ಕೆ ವಿದ್ಯುತ್ ರಫ್ತನ್ನು 10 ಸಾವಿರ ಮೆಗಾವ್ಯಾಟ್ಗೆ ಹೆಚ್ಚಿಸಲು ಭಾರತ ಮತ್ತು ನೇಪಾಳ ದೀರ್ಘಾವಧಿ ಒಪ್ಪಂದಕ್ಕೆ ಸಹಿ ಹಾಕಿವೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಇಂಧನ ಸಚಿವ ಆರ್.ಕೆ. ಸಿಂಗ್, ಸಂಬಂಧಿತ ಘಟಕಗಳಿಂದ ವಾಣಿಜ್ಯ ವಹಿವಾಟುಗಳ ಮೇಲೆ ನೇಪಾಳದಿಂದ ವಿದ್ಯುತ್ ಆಮದು ಆಧರಿಸಿರುತ್ತದೆ ಎಂದು ಮಾಹಿತಿ ನೀಡಿದರು. ಶುದ್ಧ, ಹಸಿರು ಮತ್ತು ಸುಸ್ಥಿರ ಶಕ್ತಿಯ ಮೂಲವಾಗಿರುವ ಜಲವಿದ್ಯುತ್ ವ್ಯಾಪಾರದಿಂದ ಇದು ಎರಡೂ ದೇಶಗಳಿಗೆ ಪರಸ್ಪರ ಪ್ರಯೋಜನಗಳನ್ನು ಪೂರೈಸುತ್ತದೆ ಎಂದು ಅವರು ಹೇಳಿದರು. ಗ್ರಿಡ್ನಲ್ಲಿ ದೊಡ್ಡ ಪ್ರಮಾಣದ ನವೀಕರಿಸಬಹುದಾದ ಏಕೀಕರಣದಿಂದ ಉಂಟಾಗುವ ಸಮಸ್ಯೆಗಳನ್ನು ತಗ್ಗಿಸಲು ಜಲವಿದ್ಯುತ್ ಸಹಾಯ ಮಾಡುತ್ತದೆ ಎಂದರು.

ಪತ್ರಿಕೆ ಮತ್ತು ನಿಯತಕಾಲಿಕೆಗಳ ನೋಂದಣಿ ವಿಧೇಯಕ 2023ಕ್ಕೆ ರಾಜ್ಯಸಭೆ ಅಂಗೀಕಾರ ನೀಡಿದೆ. ಆರ್ ಎನ್ ಐ ನಿಂದ ಪತ್ರಿಕೆಗಳ ಹೆಸರಿನ ಪರಿಶೀಲನೆ ಮತ್ತು ನೋಂದಣಿಯ ಆನ್ಲೈನ್ ಪ್ರಕ್ರಿಯೆ ಸರಳಗೊಳಿಸುವುದು ಈ ಮಸೂದೆಯ ಉದ್ದೇಶವಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ. ಈ ಮೊದಲು ನೋಂದಣಿ ಪ್ರಕ್ರಿಯೆಗೆ 8 ಹಂತಗಳಿದ್ದು ಈಗ ಒಂದೇ ಹಂತದಲ್ಲಿ 60 ದಿನಗಳ ನಿಗದಿತ ಸಮಯದೊಳಗೆ ಪೂರ್ಣಗೊಳ್ಳಲಿದೆ ಎಂದು ಸಚಿವರು ಹೇಳಿದ್ದಾರೆ. ನಿಯತಕಾಲಿಕೆಗಳ ಹೆಸರು ಬದಲಾವಣೆ ಅಥವಾ ವಿವರಗಳ ಬದಲಾವಣೆಗೆ ಪ್ರಕಾಶಕರು ಆರ್ಎನ್ಐ ರಿಜಿಸ್ಟ್ರಾರ್ ಅವರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಕಾಶವಾಣಿ ಮತ್ತು ದೂರದರ್ಶನ ಪ್ರಸಾರ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು ಸರ್ಕಾರ 2ಸಾವಿರದ 539 ಕೋಟಿ ರೂಪಾಯಿ ವೆಚ್ಚ ಮಾಡಲಿದೆ ಎಂದು ಅನುರಾಗ್ ಸಿಂಗ್ ಠಾಕೂರ್ ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ವಿವಿಧ ನಾಗರಿಕ ಸೇವಾ ಅಧಿಕಾರಿಗಳ ವಿರುದ್ಧ ಸಿಬಿಐ 135 ಪ್ರಕರಣಗಳನ್ನು ದಾಖಲಿಸಿದೆ ಎಂದು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ. ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಅವರು, ಈ 135 ಪ್ರಕರಣಗಳ ಪೈಕಿ 57 ಪ್ರಕರಣಗಳಲ್ಲಿ ಆಪಾದಿತರ ವಿರುದ್ದ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದರು. ಕಳೆದ ಐದು ವರ್ಷಗಳಲ್ಲಿ ಮೊದಲ ಹಂತದಲ್ಲಿ ಕೇಂದ್ರ ಜಾಗೃತ ಆಯೋಗ 12 ಸಾವಿರದ 756 ಅಧಿಕಾರಿಗಳು ಮತ್ತು ಎರಡನೇ ಹಂತದಲ್ಲಿ 887 ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗಿದೆ. ಈ ಪೈಕಿ 719 ಅಧಿಕಾರಿಗಳ ವಿಚಾರಣೆಗೆ ಸೂಚನೆ ನೀಡಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.