ನವದೆಹಲಿ: ಆರ್ಥಿಕ ದುರ್ಬಲ ವರ್ಗದವರಿಗೆ ಶೇಕಡ 10ರಷ್ಟು ಮೀಸಲಾತಿ ಒದಗಿಸುವ ಸಾಂವಿಧಾನಿಕ ಮಾನ್ಯತೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಮೀಸಲಾತಿ ನೀಡಲು ಸಂವಿಧಾನದ 103ನೇ ತಿದ್ದುಪಡಿ ಮಾಡಿರುವುದನ್ನು ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಪೀಠವು 3:2ರ ಅನುಪಾತದಿಂದ ಸಿಂಧುಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಮತ್ತು ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಅವರು ಸಿಂಧುತ್ವದ ವಿರುದ್ಧ ತಮ್ಮ ಅಭಿಮತ ವ್ಯಕ್ತಪಡಿಸಿದ್ದು, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಬೇಲಾ ಎಂ. ತ್ರಿವೇದಿ ಮತ್ತು ಜೆ.ಬಿ. ಪಾರ್ದಿವಾಲಾ ಅವರು ಸಿಂಧುತ್ವದ ಪರ ತೀರ್ಪು ನೀಡಿದ್ದಾರೆ. ಮುಖ್ಯನ್ಯಾಯಮೂರ್ತಿ ಯು.ಯು .ಲಲಿತ್ ಅವರು ಪೀಠದ ತೀರ್ಪನ್ನು ಇಂದು ಪ್ರಕಟಿಸಿದರು. ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ, ಮೀಸಲಾತಿ ಎಂಬುವುದು ಸಮಾನತೆಯ ಸಮಾಜ ರೂಪಿಸುವ ಕಡೆಗೆ ಎಲ್ಲರನ್ನು ಒಳ್ಳಗೊಳ್ಳುವ ಹಾದಿಯಾಗಿದೆ. ಯಾವುದೇ ವರ್ಗ ಅಥವಾ ಪಂಗಡವನ್ನು ಸೇರಿಸಿಕೊಳ್ಳುವ ಸಮರ್ಥನೆಯ ಸಾಧನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದು, ಆರ್ಥಿಕ ಆಧಾರದ ಮೇಲೆ ಮೀಸಲಾತಿ ಒದಗಿಸುವುದರಿಂದ ಮೂಲಭೂತ ರಚನೆ ಅಥವಾ ಭಾರತದ ಸಂವಿಧಾನದ ಆಶಯ ಉಲ್ಲಂಘನೆಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ, ಶೇಕಡಾ 10ರಷ್ಟು ಮೀಸಲಾತಿ ಕಲ್ಪಿಸುವುದರಿಂದ ಸಂವಿಧಾನದ 14ನೇ ವಿಧಿಯ ಯಾವುದೇ ಉಲ್ಲಂಘನೆಯಾಗುವುದಿಲ್ಲ. ಮೀಸಲಾತಿ ನಿರ್ಧಾರವು ಸಂಸತ್ತಿನ ಸದೃಢ ನಿರ್ಧಾರದ ಕ್ರಮವಾಗಿ ಪರಿಗಣಿಸಬೇಕು ಎಂದು ತಿಳಿಸಿದ್ದಾರೆ. ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ, ಮೀಸಲಾತಿಯೇ ಅಂತಿಮವಲ್ಲ, ಆದರೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿಸಲು ಇದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.