ಬೆಂಗಳೂರು: ಹಿಂದುಳಿದ ವರ್ಗಗಳ ಹರಿಕಾರ, ದಿವಂಗತ ಡಿ.ದೇವರಾಜ ಅರಸು ಅವರ 40 ನೇ ಪುಣ್ಯಸ್ಮರಣೆ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನ ಸೌಧದ ಪಶ್ಚಿಮ ದ್ವಾರದಲ್ಲಿರುವ ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಬಳಿಕ ಮುಖ್ಯಮಂತ್ರಿ, ಕರ್ನಾಟಕದಲ್ಲಿ ಅತಿ ಹೆಚ್ಚು ರೈತರು ಭೂಮಿಯ ಒಡೆಯರಾಗಿದ್ದರೆ ಅದಕ್ಕೆ ಡಿ. ದೇವರಾಜ ಅರಸು ಕೈಗೊಂಡಿದ್ದ ಯೋಜನೆಗಳೇ ಕಾರಣ. ಅವರ ಕಾಲ ಘಟ್ಟದಲ್ಲಿ ಕೃಷಿ ಕ್ಷೇತ್ರ, ಭೂ ಸುಧಾರಣೆ ಕಾನೂನು ಸೇರಿದಂತೆ ಸಾಮಾಜಿಕ ಮತ್ತು ಆರ್ಥಿಕ ನೆಲೆಗಟ್ಟಿನಲ್ಲಿ ಬಹಳ ದೊಡ್ಡ ಬದಲಾವಣೆ ಕಂಡಿದ್ದೇವೆ ಎಂದರು. ಅರಸು ಅವರು ತಮ್ಮ ತತ್ವ ಆದರ್ಶಗಳಿಗೆ ಬದ್ಧವಾಗಿ ನಿಂತು ಬಡವರ ಪರ ನಿಲುವು ಪ್ರತಿಪಾದಿಸಿದ ಮತ್ತು ಸಾಮಾಜಿಕ ನ್ಯಾಯ ಅನುಷ್ಠಾನಗೊಳಿಸಿದ ಏಕೈಕ ವ್ಯಕ್ತಿಯಾಗಿದ್ದರು ಎಂದು ಮುಖ್ಯಮಂತ್ರಿ ಸ್ಮರಿಸಿದರು.
ಟ್ವೀಟ್ ಕಾರ್ನರ್ :
ಬಿ ಎಸ್ ಯಡಿಯೂರಪ್ಪ
ನಾಡು ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ಹರಿಕಾರ ಶ್ರೀ ಡಿ.ದೇವರಾಜ ಅರಸ್ ಅವರ ಪುಣ್ಯತಿಥಿಯಂದು ಅವರಿಗೆ ಅನಂತ ಪ್ರಣಾಮಗಳು.
ಸಿದ್ದರಾಮಯ್ಯ ನಮನ
ಅಧಿಕಾರ, ಸಂಪತ್ತು ಮತ್ತು ಅವಕಾಶದ ಬಾಗಿಲನ್ನು ಸರ್ವರಿಗೂ ತೆರೆದು, ಸಮಾನ ಹಂಚಿಕೆಗಾಗಿ ಯೋಜನೆಗಳನ್ನು ರೂಪಿಸಿದ್ದ ಮಾದರಿ ಆಡಳಿತಗಾರ, ಪರಿವರ್ತನೆಯ ಹರಿಕಾರ ಡಿ.ದೇವರಾಜ ಅರಸು ಅವರನ್ನು ಅವರ ಪುಣ್ಯಸ್ಮರಣೆಯ ದಿನದಂದು ಗೌರವದಿಂದ ಸ್ಮರಿಸುವೆ.
ಹೆಚ್ ಡಿ ಕುಮಾರಸ್ವಾಮಿ ನಮನ
ಮಾಜಿ ಮುಖ್ಯಮಂತ್ರಿಗಳು; ಶೋಷಿತ, ದಲಿತ, ದುರ್ಬಲರ ದನಿಯಾಗಿದ್ದವರು; ಋಣಮುಕ್ತ ಕಾಯ್ದೆ- ಭೂ ಸುಧಾರಣಾ ಕಾಯ್ದೆ ಮೂಲಕ ʼಸಮಾನತೆಯ ಕರ್ನಾಟಕʼ ನಿರ್ಮಾಣಕ್ಕೆ ನಾಂದಿ ಹಾಡಿದ ಶ್ರೀ ದೇವರಾಜ್ ಅರಸ್ ಅವರ ಪುಣ್ಯಸ್ಮರಣೆ ದಿನದಂದು ಆ ಧೀಮಂತ ನಾಯಕನಿಗೆ ನನ್ನ ಶ್ರದ್ಧಾಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ.