ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಇಂದು ಕೊಡೇಕಲ್ ನಲ್ಲಿ ನಡೆದ ಸಮಾರಂಭದಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಎರಡು ಹಸಿರು ವಲಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳನ್ನು ಶಂಕುಸ್ಥಾಪನೆ ನೆರವೇರಿಸಿದರು. ಈ ಎರಡೂ ಯೋಜನೆಗಳು ಸೂರತ್ – ಚೆನ್ನೈ ಎಕ್ಸ್ ಪ್ರೆಸ್ ಮಾರ್ಗದ ಭಾಗವಾಗಿದ್ದು, ಈ ಪ್ರದೇಶದ ಜನರಿಗೆ ಉದ್ಯೋಗ ಸೇರಿದಂತೆ ಇನ್ನಿತರ ಅನುಕೂಲಗಳು ಲಭ್ಯವಾಗಲಿವೆ. ಈ ಮೂಲಕ ಜನರು ಆರ್ಥಿಕ ಸ್ವಾವಲಂಬಿಗಳಾಗಲು ನೆರವಾಗಲಿದೆ. ಇದೇ ವೇಳೆ ಯೋಜನೆಯ ಕುರಿತು ವಿಡಿಯೋ ತುಣುಕೊಂದನ್ನು ಪ್ರದರ್ಶಿಸಲಾಯಿತು.
ಕನ್ನಡದಲ್ಲಿ ಶುಭಾಶಯ ಕೋರಿ, ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ರಾಯಚೂರು, ಕಲಬುರಗಿ, ಯಾದಗಿರಿ ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಈ ಭಾಗದಲ್ಲಿ ಅನ್ವೇಷಣೆ , ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದ್ದು, ಯುವಜನರ ಕಲ್ಯಾಣಕ್ಕೆ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಮುಂದಿನ 25 ವರ್ಷ ಭಾರತಕ್ಕೆ ಮಹತ್ವದ್ದಾಗಿದ್ದು, ಈ ಅಮೃತ ಕಾಲವನ್ನು ನಾವು ಸದುಪಯೋಗಪಡಿಸಿಕೊಳ್ಳುವುದು ಅತ್ಯವಶ್ಯವಾಗಿದೆ. ದೂರದೃಷ್ಟಿ ಯೋಜನೆಗಳೊಂದಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸಬೇಕಾಗಿದೆ. ಈ ಅಭಿಯಾನಕ್ಕೆ ಪ್ರತಿಯೊಬ್ಬ ನಾಗರಿಕರ ಕೊಡುಗೆ ಅನನ್ಯವಾಗಿದೆ. ಕೃಷಿಕರೆ ಇರಲಿ, ಉದ್ಯೋಗಿಗಳೇ ಇರಲಿ ಎಲ್ಲರ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದರು. ಉತ್ತರ ಕರ್ನಾಟಕ ಭಾಗ ಯಾವುದೇ ಕ್ಷೇತ್ರದಲ್ಲಿ ಹಿಂದೆ ಬಿದ್ದಿಲ್ಲ. ಯಾದಗಿರಿ ಸೇರಿದಂತೆ ಅನೇಕ ಜಿಲ್ಲೆಗಳು ತನ್ನದೇ ಆದ ಸಾಮರ್ಥ್ಯವನ್ನು ಹೊಂದಿದ್ದು, ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ತಮ್ಮ ಸರ್ಕಾರ ಎಂದಿಗೂ ಮತ ಬ್ಯಾಂಕ್ ನ ರಾಜಕಾರಣವನ್ನು ಮಾಡಿಲ್ಲ. ಜನರ ಕಲ್ಯಾಣ, ವಿಕಾಸ ನಮ್ಮ ಮೊದಲ ಆದ್ಯತೆಯಾಗಿದೆ . ಆರೋಗ್ಯ , ಶಿಕ್ಷಣ, ಮೂಲಸೌಕರ್ಯ, ನೀರಾವರಿ ಹೀಗೆ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ಸರ್ಕಾರ ಒತ್ತು ನೀಡಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಂದಿನ 10 ವರ್ಷ ನೀರಾವರಿ ದಶಕ ಎಂದು ಘೋಷಿಸಿ, ಅದಕ್ಕೆ ಪೂರಕವಾಗಿ ಅನುದಾನವನ್ನು ಒದಗಿಸಲಾಗುವುದು. 10 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು . ಬಿಜೆಪಿ ಸರ್ಕಾರವು ಹಲವು ಜನಪರ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದು ತಿಳಿಸಿದರು. ನಾರಾಯಣಪುರ ಎಡದಂಡೆ ಯೋಜನೆಯ ಅನುಷ್ಠಾನದಿಂದ ಲಕ್ಷಾಂತರ ಜನರಿಗೆ ಉಪಯೋಗವಾಗಲಿದೆ. ಏಷ್ಯಾದಲ್ಲೇ ಅತಿ ದೊಡ್ಡ ಸ್ಕಾಡಾ ಯೋಜನೆ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, ಇದರಿಂದ ನೀರಿನ ನಿರ್ವಹಣೆ, ನೀರಿನ ಉಳಿತಾಯ ಮತ್ತು ಬಳಕೆಯ ಲೆಕ್ಕಾಚಾರಗಳು ಸ್ಪಷ್ಟವಾಗಿ ಲಭ್ಯವಾಗಲಿವೆ. ಲಕ್ಷಾಂತರ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ದೊರೆಯುತ್ತದೆ ಎಂದರು.
ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಭಗವಂತ್ ಖೂಬಾ, ಸಂಸದ ರಮೇಶ್ ಜಿಗಜಿಣಗಿ, ಸಚಿವರಾದ ಗೋವಿಂದ ಕಾರಜೋಳ, ಶಾಸಕರಾದ ನರಸಿಂಹ ನಾಯಕ (ರಾಜೂ ಗೌಡ) ಸೇರಿದಂತೆ ಅನೇಕ ಗಣ್ಯಮಾನ್ಯರು ಉಪಸ್ಥಿತರಿದ್ದರು.
_CLICK to Follow-Support us on DailyHunt